ಸತ್ಯನಾರಾಯಣ ಬೆಳೇರಿ ಅವರನ್ನು ಅಭಿನಂದಿಸಿದ ಕರ್ನಾಟಕದ ಕೃಷಿ ಸಚಿವ ಬಿ.ಸಿ. ಪಾಟೀಲ್

ಬೆಂಗಳೂರು, 15 ಫೆಬ್ರವರಿ 2022:
ಕರ್ನಾಟಕ ಕೃಷಿ ಸಚಿವರಾದ ಶ್ರೀ ಬಿ.ಸಿ. ಪಾಟೀಲ್ ಅವರು ಕಾಸರಗೋಡಿನ ಕೃಷಿಕ, ಭತ್ತದ 650ಕ್ಕೂ ಹೆಚ್ಚಿನ ಮೂಲತಳಿಗಳ ಸಂರಕ್ಷಕ ಸತ್ಯನಾರಾಯಣ ಬೆಳೇರಿ ಅವರ ಸಾಧನೆಯ ಕುರಿತು ತಿಳಿದು ಕರೆ ಮಾಡಿ ಅಭಿನಂದಿಸಿದರು.

ವಿಕಾಸ ಟ್ರಸ್ಟ್ (ರಿ.) ಇತ್ತೀಚೆಗೆ ನಡೆಸಿದ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನದ 30ನೇ ದಿನ ಇವರ ಸಾಧನೆಯ ಕುರಿತು ಮಾಹಿತಿ ಪತ್ರ ಬಿಡುಗಡೆ ಮಾಡಿತ್ತು. ಟ್ರಸ್ಟ್ ಅಧ್ಯಕ್ಷರಾದ ರವಿನಾರಾಯಣ ಗುಣಾಜೆ ಅವರು ಇಂದು ಸಚಿವರನ್ನು ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿ ಬೆಳೇರಿ ಅವರ ಸಾಧನೆಯನ್ನು ಗಮನಕ್ಕೆ ತಂದರು. ಬೆಳೇರಿ ಅವರ ಕುರಿತಾದ ಮಾಹಿತಿ ಪತ್ರವನ್ನು ಸಂಪೂರ್ಣ ಓದಿ ಹೆಮ್ಮೆಪಟ್ಟ ಸಚಿವರು, ತಕ್ಷಣ ಫೋನ್ ಮೂಲಕ ಸಂಪರ್ಕಿಸಿ ಅಭಿನಂದಿಸಿದರು. ಮುಂದಿನ ದಿನಗಳಲ್ಲಿ ಇವರ ಅನುಭವವನ್ನು ಕರ್ನಾಟಕ ಕೃಷಿ ಇಲಾಖೆ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದರು.

11 ನವೆಂಬರ್ 2021ರಂದು ಕೇಂದ್ರ ಕೃಷಿ ಇಲಾಖೆಯು, ಸ್ಥಳೀಯ ಬೀಜ ವೈವಿಧ್ಯವನ್ನು ಸಂರಕ್ಷಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ನೀಡುವ Plant Genome Saviour Farmer Reward ಎಂಬ ರಾಷ್ಟ್ರೀಯ ಪುರಸ್ಕಾರ ನೀಡಿ ಸತ್ಯನಾರಾಯಣ ಬೆಳೇರಿ ಅವರನ್ನು ಪುರಸ್ಕರಿಸಿತ್ತು.