ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 37ನೇ ದಿನದ ಮಾಹಿತಿ ಪತ್ರ ಬಿಡುಗಡೆಗೊಳಿಸಿದ ಸಚಿವ ಬಿ.ಸಿ. ನಾಗೇಶ್

ಬೆಂಗಳೂರು, 7 ಡಿಸೆಂಬರ್ 2021
ವಿಕಾಸ ಟ್ರಸ್ಟ್ ನಡೆಸುತ್ತಿರುವ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 37ನೇ ದಿನದ ಕಾಸರಗೋಡು ಮತ್ತು ಕನ್ನಡ ಶಾಲೆಗಳು ಕುರಿತಾದ ಮಾಹಿತಿ ಪತ್ರವನ್ನು ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಶ್ರೀ ಬಿ.ಸಿ. ನಾಗೇಶ್ ಅವರು ವಿಧಾನ ಸೌಧದ ತಮ್ಮ ಕೊಠಡಿಯಲ್ಲಿ ಬಿಡುಗಡೆಗೊಳಿಸಿದರು.

ವಿಕಾಸ ಟ್ರಸ್ಟ್ ನಿಯೋಗ ಕಾಸರಗೋಡಿನ ಕನ್ನಡ ಶಾಲೆಗಳ ಸ್ಥಿತಿ-ಗತಿ, ಕಾಸರಗೋಡು ಮತ್ತು ಕರ್ನಾಟಕದ ಬಾಂಧವ್ಯ, ಕೋವಿಡ್ ಮಹಾಮಾರಿ ನಂತರದ ಗಡಿ ಸಮಸ್ಯೆ, ಕಾಸರಗೋಡಿನ ಮತ್ತು ಕನ್ನಡದ ಸಾಂಸ್ಕೃತಿಕ ಹಿರಿಮೆ ಮುಂತಾದ ವಿಷಯಗಳ ಕುರಿತು ವಿವರವಾಗಿ ಚರ್ಚೆ ನಡೆಸಿತು. ಮಾಹಿತಿ ಅಭಿಯಾನದ ಅಂಗವಾಗಿ ಇದುವರೆಗೆ ನಡೆಸಿದ 37 ದಿನಗಳ ಮಾಹಿತಿ ಪತ್ರಗಳನ್ನು ಆಸಕ್ತಿಯಿಂದ ಗಮನಿಸಿದ ಸಚಿವರು ಇನ್ನಷ್ಟು ಮಾಹಿತಿಯನ್ನು ಕೇಳಿ ತಿಳಿದುಕೊಂಡರು.

ಕಾಸರಗೋಡು ಮತ್ತು ಕನ್ನಡ ಶಾಲೆಗಳು ಮಾಹಿತಿ ಪತ್ರದ ಆಶಯ ನುಡಿಗಳ ಕುರಿತು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ಭಾರತೀಯ ಭಾಷೆಗಳು ಯಾವತ್ತೂ ಪ್ರತಿಸ್ಪರ್ಧಿಗಳಲ್ಲ ಮತ್ತು ಅವುಗಳ ಮೇಲೆ ಹೆಚ್ಚುತ್ತಿರುವ ಇಂಗ್ಲಿಷ್ ಪ್ರಭಾವದ ಕುರಿತು ತಮ್ಮ ಕಳವಳವನ್ನು ಹಂಚಿಕೊಂಡರು. ಕಾಸರಗೋಡಿನ ಜನರು ಇಷ್ಟು ಪ್ರಮಾಣದಲ್ಲಿ ಕನ್ನಡ ಶಾಲೆಗಳನ್ನು ಉಳಿಸಿಕೊಂಡಿರುವ ಕುರಿತು ತಮ್ಮ ಸಂತೋಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿಕಾಸ ಟ್ರಸ್ಟ್ ಅಧ್ಯಕ್ಷರಾದ ರವಿನಾರಾಯಣ ಗುಣಾಜೆ, ಸದಸ್ಯರಾದ ಗಣೇಶ್ ರೈ ಉಪಸ್ಥಿತರಿದ್ದರು.